ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದಾದ ಕಲೆ ಹಾಗೂ ಸಾಹಿತ್ಯದ ತವರೂರಾದ ಧಾರಾನಗರಿ ಧಾರವಾಡದ ಹೆಮ್ಮೆಯ ಪ್ರತೀಕ ಕರ್ನಾಟಕ ವಿಶ್ವವಿದ್ಯಾಲಯ.
ಇಲ್ಲಿನ ವಿದ್ಯಾ ಸೌಧದಲ್ಲಿ ಏಳು ಅಂತಸ್ತುಗಳ ಮೇಲೆ ನಾಲೂ ದಿಕ್ಕಿನಲ್ಲಿ ಇರುವ ಐತಿಹಾಸಿಕ ಗಡಿಯಾರದ ಗೋಪುರವು ಪ್ರತಿಯೊಬ್ಬ ಧಾರವಾಡದ ನಿವಾಸಿಗ ತನ್ನ ದೈನಂದಿನ ವೇಳಾಪಟ್ಟಿಯನ್ನು ನಿಗದಿಪಡಿಸುವ ಅನಿವಾರ್ಯ ಉಪಕರಣದಂತೆ ಇದೆ.
1962 ರಲ್ಲಿ ಇಂಗ್ಲೆಂಡ್ ನಲ್ಲಿ ತಯಾರಾಗಿ ಮುಂಬೈನ ಟೈಮ್ ಮಷೀನ್ ಕಂಪನಿಯಿಂದ ಜೋಡಿಸಲ್ಪಟ್ಟು, ಸ್ಥಾಪಿತವಾದ ಈ ಗಡಿಯಾರ ಗೋಪುರದ ಮೊಳಗು ಸುಮಾರು ೫ ಕಿಮೀ.ಗಳವರೆಗೂ ಕೇಳಿ ಬರುತ್ತಿತ್ತು ಎಂಬ ಪ್ರತೀತಿಯಿದೆ.
ಈಚೆಗೆ ಕೆಲವು ವರ್ಷಗಳಿಂದ ಈ ಗೋಪುರದ ಉತ್ತರ ಹಾಗೂ ದಕ್ಷಿಣಾಭಿಮುಖವಾದ ಎರಡು ಗಡಿಯಾರಗಳು ನಿಂತು ಹೋಗಿ ಇವೆರಡೂ ತಮ್ಮ ಇನ್ನೆರಡು ಸಂಗಾತಿಗಳಿಂದ ತಾಳತಪ್ಪಿ ಹೋದಂತೆ ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಧಾರಾನಗರಿಯ ನಿವಾಸಿಗಳಿಗೆ ಭಾಸವಾಗುತ್ತಿತ್ತು.
ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ ತಂಡ ಇತ್ತೀಚಿಗೆ ಕರ್ನಾಟಕ ಕಾಲೇಜಿನ ಅತಿ ಪ್ರಾಚೀನ ಗಡಿಯಾರವನ್ನು ಯಶಸ್ವಿಯಾಗಿ ಪುನರ್ಸ್ಮಾಪಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿಯವರು ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಪಿ. ಕೆ. ಮಿಶ್ರಾ ರವರನ್ನು ಈ ಐತಿಹಾಸಿಕ ಗೋಪುರದ ಪುನಶ್ವೇತನಕ್ಕಾಗಿ ಸಂಪರ್ಕಿಸಿದರು.
ಐತಿಹಾಸಿಕ ರೈಲ್ವೆ ಸ್ಮಾರಕಗಳ ಪುನರುಜೀವನ ಯೋಜನ ಅದರಲ್ಲೂ ಪ್ರಮುಖವಾಗಿ ಈಸ್ಟ್ ಇಂಡಿಯನ್ ರೈಲ್ವೆಯ ಯೋಜನೆಗಳಲ್ಲಿ ಪರಿಣತಿಯನ್ನು ಹೊಂದಿರುವ ಶ್ರೀ ಮಿಶ್ರಾರವರ ಮಾರ್ಗದರ್ಶನದೊಂದಿಗೆ ಈ ಕಾರ್ಯವನ್ನು ನೆರವೇರಿಸಲಾಗಿದೆ.
ಸಹಾಯಕ ಕಾರ್ಯಾಗಾರ ನಿರ್ವಾಹಕ ಶ್ರೀ. ಪ್ರಭಾತ್ ಝಾ ರವರ ನೇತೃತ್ವದಲ್ಲಿ ಶ್ರೀ.ವಿಶ್ವನಾಥ್, ವರಿಷ್ಠ ವಿಭಾಗೀಯ ಅಭಿಯಂತರು ಹಾಗೂ ಗಡಿಯಾರ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಿರುವ ತಾಂತ್ರಿಕ ಸಿಬ್ಬಂದಿಗಳಾದ ಶ್ರೀ ಮನ್ಸೂರ್ ಅಲಿ ಮುಲ್ಲಾ, ಶ್ರೀ ದೇವೇಂದ್ರ ಎಸ್. ಲೊಂಡ ಶ್ರೀ ಯೂನಸ್ ಇವರುಗಳೊಂದಿಗೆ ಶ್ರೀ. ಎದ್ದು ವೆಂಕಟರಾವ್ ವರಿಷ್ ವಿಭಾಗೀಯ ಅಭಿಯಂತರು ಮತ್ತು ಶ್ರೀ ವಿಜಯ್ ಕುಮಾರ್ ಹೆಬ್ಬಳ್ಳಿ ಇವರುಗಳನ್ನೊಳಗೊಂಡ ತಂಡವು ಈ ಗಡಿಯಾರ ಗೋಪುರದ ಪುನರ್ಸ್ಥಾಪನಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು.
ಕರ್ನಾಟಕ ಕಾಲೇಜಿನ ಗಡಿಯಾರಕ್ಕಿಂತ ಎಂಟು ಪಟ್ಟು ದೊಡ್ಡದಾದ ಈ ಗಡಿಯಾರದ ಕಾರ್ಯಾಚರಣೆಯಲ್ಲಿ, ಗಡಿಯಾರದ ಕೆಲವು ಬಿಡಿಭಾಗಗಳು ಸ್ಥಳೀಯ ಮಾರುಕಟ್ಟೆಯಲ್ಲಿ ದೊರಕದೆ, ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದ ಸಿಬ್ಬಂದಿ ಕಾರ್ಯಾಗಾರದಲ್ಲೇ ತಯಾರಿಸಿದ್ದಾರೆ.
ಕೇವಲ ೧೫ ಅಂಗುಲಗಳ ಪ್ಲಾಟ್ ಫಾರ್ಮ್ ನ ಸಹಾಯದೊಂದಿಗೆ ಕಾರ್ಯ ನಿರ್ವಹಿಸುವಲ್ಲಿ ವೈಯಕ್ತಿಕ ಅಪಾಯವನ್ನೂ ಲೆಕ್ಕಿಸದೆ, ಎಲ್ಲಾ ಸವಾಲುಗಳನ್ನೂ ಎದುರಿಸಿ ಪರಂಪರೆಯ ಸಂರಕ್ಷಣೆಯ ಕಾರ್ಯದಲ್ಲಿ ಸುಮಾರು ಒಂದು ತಿಂಗಳು ಅಪಾರ ಸಮರ್ಪಣೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡು, ರೈಲ್ವೆ ಕಾರ್ಯಾಗಾರದ ತಂಡ ಆಗಸ್ಟ್ 28, 2021 ರಂದು ಯಶಸ್ವಿಯಾಗಿ ಪೂರೈಸಿತು.
ಪ್ರಾಸಂಗಿಕವಾಗಿ, ಧಾರವಾಡದ ಕರ್ನಾಟಕ ಕಾಲೇಜಿನ ಕಟ್ಟಡದ ಆವರಣವು ಹಿಂದಿನ ಸದರ್ನ್ ಮಾರಾಠಾ ರೈಲ್ವೆಯ ಪ್ರಥಮ ಪ್ರಧಾನ ಕಚೇರಿಯಾಗಿ ಸುಮಾರು ನೂರು ವರ್ಷಗಳ ಹಿಂದ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ನಾಪಕರಾದ ಶ್ರೀ ಸಂಜೀವ್ ಕಿಶೋರ್ ರವರು ರೈಲ್ವೆ ಕಾರ್ಯಾಗಾರದ ತಂಡದ ಪರಿಶ್ರಮವನ್ನು ಶ್ಲಾಘಿಸಿದುದಲ್ಲದೇ ಈ ಬಗೆಯ ಪ್ರಯತ್ನಗಳು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುವು ಎಂದು ಹೇಳಿದರು. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಆಸಕ್ತಿಯುಳ್ಳ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಹಾಗೂ ಔದ್ಯಮಿಕ ಸಂಸ್ಥೆಗಳೊಂದಿಗೆ ಕೈಜೋಡಿಸಲು ಸಿದ್ಧ ಎಂದು ಅವರು ತಿಳಿಸಿದರು.