ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರಿಂದ ಮತದಾರಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪರಿಶೀಲನೆ

ರಾಜ್ಯ ಸ್ವೀಪ್ (SVEEP) ನೋಡಲ್ ಅಧಿಕಾರಿ ಪಿ. ಎಸ್.‌ ವಸ್ತ್ರದ ಅವರು ಇಂದು ಬೆಳಿಗ್ಗೆ ಕರ್ನಾಟಕ ವಿಧಾನಸಭಾ ಮತಕ್ಷೇತ್ರ 71 ಮತ್ತು 74 ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣ ಕಾರ್ಯದ ಕುರಿತು ಮಾಹಿತಿ ಪಡೆದರು.

ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಜರುಗಿಸಿ, ಮತದಾರ ಪಟ್ಟಿ ಪರಿಷ್ಕರಣೆಯ ಕಾರ್ಯ ಲೋಪ ಉಂಟಾಗದಂತೆ ಮಾಡಲು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿಮನೆಗೆ ಭೇಟಿ ನೀಡಿ, ಮತದಾರಪಟ್ಟಿಯ ಪರಿಷ್ಕರಣೆ ಮಾಹಿತಿಯನ್ನು ನೀಡುತ್ತಿರುವದನ್ನು ಸಂಬಂಧಿಸಿದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಪರಿಶೀಲಿಸಬೇಕು.

ಮತದಾರ ನೋಂದಣಿ, ವರ್ಗಾವಣೆ, ರದ್ದುಪಡಿಸುವ ಕುರಿತು ನಮೂನೆಗಳಲ್ಲಿ ಆಯೋಗ ಬದಲಾವಣೆ ಮಾಡಿರುವ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು ಎಂದು ಪಿ.ಎಸ್. ವಸ್ತ್ರದ ಅವರು ಹೇಳಿದರು.

ಮತದಾರ ಪಟ್ಟಿಗೆ 17 ವರ್ಷ ತುಂಬಿದವರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಅವರಿಗೆ 18 ವರ್ಷ ತುಂಬಿದ ತಕ್ಷಣ ಮತದಾರಚೀಟಿ ಲಭಿಸುತ್ತದೆ. ಅರ್ಜಿ ಸಲ್ಲಿಸಲು ಈಗ ಅವರು 18 ವರ್ಷ ತುಂಬುವವರೆಗೆ ಕಾಯಬೇಕಿಲ್ಲ.

ನವ ಮತದಾರರ ನೋಂದಣಿಗೆ ಈಗ ವರ್ಷದಲ್ಲಿ ನಾಲ್ಕು ಸಲ ಅವಕಾಶ ನೀಡಲಾಗಿದೆ ಈ ಎಲ್ಲ ಮಾಹಿತಿಯನ್ನು ಮತದಾರರಿಗೆ ವಿಶೇಷ ಅಭಿಯಾನದ ಮೂಲಕ ತಲುಪಿಸಬೇಕೆಂದು ಅವರು ತಿಳಿಸಿದರು.

ಮತದಾರಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಜಾಗರೂಕತೆಯಿಂದ ನಡೆಯಬೇಕು. ಯಾವುದೇ ತಪ್ಪುಗಳು ಉಂಟಾಗದಂತೆ ಗಮನಹರಿಸಬೇಕು.

ಮತಗಟ್ಟೆ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಎಜೆಂಟರನ್ನು ನೇಮಿಸಿದ್ದರೆ, ಅವರಿಗೂ ಸಹ ಅಗತ್ಯವಿದ್ದಲ್ಲಿ ಮಾಹಿತಿ ನೀಡಿ, ಅವರ ಸಹಕಾರವನ್ನು ಪಡೆಯಬಹುದು.

ಒಟ್ಟಾರೆ ಎಲ್ಲರ ಮಾಹಿತಿ, ಸಹಕಾರದೊಂದಿಗೆ ಸಮರ್ಪಕವಾಗಿ ಮತಪಟ್ಟಿ ವಿಶೇಷ ಪರಿಷ್ಕರಣ ಕಾರ್ಯ ನಡೆಯಬೇಕು ಎಂದು ಪಿ.ಎಸ್.ವಸ್ತ್ರದ ಹೇಳಿದರು.

ಸಭೆಯಲ್ಲಿ ಧಾರವಾಡ 71 ಮತಕ್ಷೇತ್ರದ ಸಹಾಯಕ ಮತದಾರ ನೋಂದಣಿ ಅಧಿಕಾರಿ, ತಹಸಿಲ್ದಾರ ಸಂತೋಷ ಹಿರೇಮಠ, 74 ಮತಕ್ಷೇತ್ರದ ಸಹಾಯಕ ನೋಂದಣಿ ಅಧಿಕಾರಿ ಮಹಾನಗರ ಪಾಲಿಕೆಯ ಅಪರ ಆಯುಕ್ತ ಶಂಕರಾನಂದ ಬನಶಂಕರಿ, ಜಿಕ್ಲಾಧಿಕಾರಿಗಳ ಕಚೇರಿ ಚುನಾವಣಾ ಶಾಖೆಯ ತಹಸಿಲ್ದಾರ ಎಚ್.ಎನ್.ಬಡಿಗೇರ, ತಹಸಿಲ್ದಾರ ಕಚೇರಿ ಚುನಾವಣಾ ಶಿರಸ್ತೆದಾರ ಮಂಜುನಾಥ ಗೂಳಪ್ಪನವರ, ಮಹಾನಗರಪಾಲಿಕೆ ಸಹಾಯಕ ಮತದಾರ ನೋಂದಣಿ ಅಧಿಕಾರಿ ಉಮೇಶ ಸವಣೂರ ಸೇರಿದಂತೆ ಇತರರು ಇದ್ದರು.

Share this article!

Leave a Reply

Your email address will not be published. Required fields are marked *

error: Content is protected !!