ಧಾರವಾಡ ಕೃಷಿ ವಿಶ್ವವಿದ್ಯಾಲಯದ 36ನೇ ಸಂಸ್ಥಾಪನಾ ದಿನ ಆಚರಣೆ

ನಿನ್ನೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ವಿಶ್ವವಿದ್ಯಾಲಯ 36ನೇ ಸಂಸ್ಥಾಪನಾ ದಿನಾಚರಣೆಯನ್ನು ಸಂಸದರಾದ ಪ್ರಹ್ಲಾದ್ ಜೋಷಿ ಅವರು ಉದ್ಘಾಟಿಸಿದರು.

ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಕೃಷಿಯ ಕೊಡುಗೆ ಅಮೂಲಾಗ್ರವಾಗಿದ್ದು, ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಇಂದಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳು ಆಗಬೇಕಿವೆಯೆಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಪ್ರಹ್ಲಾದ್ ಜೋಷಿ ಅವರು ಮಾತನಾಡುತ್ತಾ, ಭಾರತವು ಯುವಜನಾಂಗದ ದೇಶವಾಗಿದೆ. ಈ ಯುವ ಜನಾಂಗವೇ ಈ ದೇಶದ ಸಂಪನ್ಮೂಲವಾಗಿದೆ.

ಕೃಷಿ ಪದವಿಧರರು ಕೌಶಲ್ಯ ಆಧಾರಿತ ನೂತನ ಕೃಷಿ ಉತ್ಪನ್ನಗಳನ್ನು ಬಳಸಿ ಉದ್ಯಮಿಗಳಾಗಬೇಕೆಂದು ತಿಳಿಸಿದರು.

ಕೃಷಿ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರಯೋಗದ ಫಲಿತಾಂಶಗಳು ಕ್ಷೇತ್ರಮಟ್ಟಕ್ಕೆ ತಲುಪಬೇಕಿದೆ. ಲ್ಯಾಬ್ ಟೂ ಲ್ಯಾಂಡ್ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆಯೆಂದರು.

ಜಗತ್ತಿನ ಆಹಾರ ಭದ್ರತೆಗೆ ಭಾರತದ ಕೊಡುಗೆ ಅಪಾರ. ಇಡೀ ಜಗತ್ತೇ ಇಂದು ಭಾರತದತ್ತ ನೋಡುತ್ತಿದೆ. ಭಾರತದ ರೀತಿ-ನೀತಿ, ಆಹಾರ ಪದ್ಧತಿ, ಜೀವನ ಪದ್ಧತಿ, ಯೋಗ, ಆಚಾರ, ವಿಚಾರಗಳಿಗೆ ಇಡೀ ಜಗತ್ತು ಒಪ್ಪಿಕೊಂಡಿದೆ.

ಮುಂಬರುವ ದಿನಮಾನಗಳಲ್ಲಿ ಭಾರತವು 3ನೇ ದೊಡ್ಡ ಆರ್ಥಿಕ ದೇಶವಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಪದವಿಧರರು ಹೊಸ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕೆಂದರು.

ರೈತರಿಗೆ ಕಡಿಮೆ ಖರ್ಚಿನಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ನೀಡುವ ತಳಿಗಳನ್ನು ವಿಜ್ಞಾನಿಗಳು ಹೆಚ್ಚು ಹೊರ ತರಬೇಕಿದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕ ಇಳುವರಿ ಪಡೆಯಲು ಅಭಿವೃದ್ಧಿಪಡಿಸಿದ 40 ಬೇಸಾಯ ತಂತ್ರಜ್ಞಾನಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆಯೆಂದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 5 ಹೊಸ ಸಂಶೋಧನಾ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ 274 ಕೋಟಿ ಅನುದಾನದ ಯೋಜನೆಗಳು ಪ್ರಗತಿಯಲ್ಲಿವೆ.

ರಾಜ್ಯ ಸರ್ಕಾರದಿಂದ 332 ಕೋಟಿ ರೂ.ಗಳ 3 ಹೊಸ ಸಂಶೋಧನಾ ಕಾರ್ಯಕ್ರಮಗಳು ಪ್ರಗತಿಯಲ್ಲಿವೆಯೆಂದರು.

ವಿಶ್ವಬ್ಯಾಂಕ್ ನೆರವಿನ ಜಲಾನಯ ಅಭಿವೃದ್ಧಿ ಇಲಾಖೆಯ ರಿವಾರ್ಡ್ ಯೋಜನೆಯಡಿ ಒಟ್ಟು 272 ಕೋಟಿ ರೂ.ಗಳ ಯೋಜನೆ ಪ್ರಗತಿಯಲ್ಲಿದೆಯೆಂದು ಡಾ. ಪಾಟೀಲ ತಿಳಿಸಿದರು.

ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಮಹಾನಿರ್ದೇಶಕರಾದ ಡಾ.ಸುರೇಶಕುಮಾರ ಚೌಧರಿ ಮಾತನಾಡಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೊಡುಗೆ, ಸ್ಥಾನಮಾನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಹೊಸ ಸಂಶೋಧನೆಗಳು, ಮಳೆಯಾಶ್ರಿತ ಪ್ರದೇಶದ ರಿವಾರ್ಡ್ ಯೋಜನೆಗಳು ಇಡೀ ರಾಜ್ಯಕ್ಕೆ ಮಾದರಿಯಾಗಲಿವೆ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಶಂತಾರಾಮ ಸಿದ್ಧಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!