ಬಳ್ಳಾರಿಯಲ್ಲಿ ಕಲ್ಯಾಣ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ

ಸಾರಿಗೆ ಇಲಾಖೆ ವತಿಯಿಂದ 4ಕೋಟಿ ರೂ.‌ ವೆಚ್ಚದಲ್ಲಿ ನಿರ್ಮಿಸಲಾಗುವ ಕಲ್ಯಾಣ ಕೇಂದ್ರ ವು ಇಡೀ ರಾಜ್ಯದಲ್ಲಿಯೇ ಅತಿದೊಡ್ಡ ಕಲ್ಯಾಣ ಮಂಟಪವಾಗಲಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ಕಚೇರಿ ಹಿಂಭಾಗದ 2ನೇ ಹಳೇ ಬಸ್ ಘಟಕದಲ್ಲಿ ಶನಿವಾರ ನೂತನ ಕಾರ್ಮಿಕ ಕಲ್ಯಾಣ ಕೇಂದ್ರ ದ ನಿರ್ಮಾಣಕ್ಕೆ ಶಂಕುಸ್ಥಾಪನಾ ಅಡಿಗಲ್ಲು ಹಾಗೂ ಭೂಮಿ ಪೂಜೆ ನೆರವೇರಿಸಿ ಬಿ.ಶ್ರೀರಾಮುಲು ಅವರು ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವು ರಚನೆಯಾಗಿದ್ದು, ಸಾರಿಗೆ ನಿಗಮವು 6ನೇ ವೇತನದಲ್ಲಿದ್ದು, ನಿಗಮದ ನೌಕರರಿಗೆ 7ನೇ ವೇತನಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು.

ಕಾರ್ಮಿಕ ಕಲ್ಯಾಣ ಕೇಂದ್ರದ ವಿಶೇಷತೆ: ಸುಮಾರು 1 ಎಕರೆ ಪ್ರದೇಶದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಕೇಂದ್ರವು ನಿರ್ಮಾಣವಾಗಲಿದೆ.

ನೆಲಮಹಡಿ 1306 ಚ.ಮೀ, ಮೊದಲ ಮಹಡಿ 1246 ಚ.ಮೀ ಸೇರಿದಂತೆ ಒಟ್ಟು ವಿಸ್ತೀರ್ಣ 2553 ಚ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ.

ನೆಲ ಅಂತಸ್ತಿನಲ್ಲಿ 04 ಸುಸಜ್ಜಿತ ಕೊಠಡಿಗಳು, ವಿಶಾಲವಾದ ಊಟದ ಪ್ರಾಂಗಣ, ವಿಶಾಲವಾದ ಅಡುಗೆ ಕೋಣೆ, ಶೌಚಾಲಯ ಮತ್ತು ಮೊದಲನ ಅಂತಸ್ತಿನಲ್ಲಿ ವಿಶಾಲವಾದ ಪ್ರಾಂಗಣ (1000 ಜನರಿಗೆ) 02 ಕೊಣೆಗಳು (ವರ ಹಾಗೂ ವಧುವಿಗೆ), ಮೊದಲನ ಅಂತಸ್ತಿಗೆ ನೇರವಾಗಿ ಹೋಗಲು ಮುಂಭಾಗ ಹಾಗೂ ಹಿಂಭಾಗದಿಂದ ಹೋಗಲು ವಿಶಾಲವಾದ ಮೆಟ್ಟಲು ಇರಲಿವೆ.

ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿದ ಚಾಲನಾ ಸಿಬ್ಬಂದಿಗಳಿಗೆ ಹಾಗೂ ನಿಗಮದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರೂಪಾಕ್ಷಗೌಡ, ಮಹಾನಗರ ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು, ಕಲ್ಪನ, ಹಾಜರಿದ್ದರು.

ಕಲಬುರಗಿಯ ಕಕರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ, ಮುಖ್ಯ ಕಾಮಗಾರಿ ಇಂಜಿನಿಯರ್ ಮೆಹಬೂಬ ಸಾಹೇಬ ಎ.ದೇವೂರು, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ.ಡಿ.ಎಂ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!