ಕೇಂದ್ರ ಸರ್ಕಾರದ ಬಹು ಮುಖ್ಯ ಯೋಜನೆಯಾಗಿರುವ ಜಲ ಜೀವನ ಮಿಷನ್ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಅವರು ಶ್ಲ್ಯಾಘಿಸಿದರು.
ನಿನ್ನೆ ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಿಷನ್ ಯಶಸ್ವಿಯಾಗಿ ಜಾರಿಗೊಳ್ಳಿಸಲು 334 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಅನುಮೋದಿಲಾಗಿದೆ. ಜಲ ಜೀವನ ಮಿಷನ್ ಅಡಿ ಗ್ರಾಮಗಳಲ್ಲಿನ ಮನೆ ಮನೆಗಳಿಗೆ ನಳ ಸಂಪರ್ಕ, ಕೋಳವೆಗಳ ಜೋಡನೆ ಸೇರಿದಂತೆ ಗ್ರಾಮದೋಳಗಿನ ನೀರು ಸರಬರಾಜು ಸೌಕರ್ಯಗಳನ್ನು ಉನ್ನತಿಕರಿಸಲಾಗುತ್ತಿದೆ.
ಧಾರವಾಡ ಜಿಲ್ಲೆ ಉತ್ತಮ ಸಾಧನೆ ತೋರುತ್ತಿದ್ದು ಈಗಾಗಲೇ 165 ಕಾಮಗಾರಿಗಳು ಆರಂಭವಾಗಿದ್ದು, ಉಳಿದ 189 ಕಾಮಗಾರಿಗಳು ಟೆಂಡರ್ ಹಾಗೂ ಕಾರ್ಯದೇಶ ಹಂತದಲ್ಲಿವೆ. ಜಲ ಜೀವನ ಮಿಷನ್ ಯೋಜನೆ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವರು ಶ್ಲ್ಯಾಘಿಸಿದರು.
ಸ್ವಚ್ಚ ಭಾರತ ಮಿಷನ್, ನಿರಂತರ ವಿದ್ಯುತ್ ಯೋಜನೆ, ಸಂಸದರ ಆದರ್ಶ ಗ್ರಾಮ ಯೋಜನೆ, ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ ಸೇರಿದಂತೆ ಇತರ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಸಚಿವರು ನಿರ್ದೇಶಿಸಿದರು.
ಸಭೆಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ.ನಿಂಬ್ಬಣ್ಣವರ, ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯಕಾರ್ಯದರ್ಶಿ ಡಾ.ಸುಶೀಲಾ.ಬಿ. ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿರುವ ಪಂಚಾಯಿತಿ ಪ್ರಪಂಚ ಪುಸ್ತಕ ಕೈಪಿಡಿಯನ್ನು ಸಚಿವರು ಬಿಡುಗಡೆಗೊಳಿಸಿದರು. ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ನಬಾರ್ಡ್ ಜಿಲ್ಲಾ ಅಭಿವೃಧಿ ವ್ಯವಸ್ಥಾಪಕ ಮೈಯೂರ ಕಾಮತ್, ಉಪಸ್ಥಿತರಿದ್ದರು.
ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ.ಬಿ., ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ದಿಶಾ ಸಮಿತಿಯ ಸದಸ್ಯರಾದ ಮೌನೇಶ ಬಡಿಗೇರ, ಯಲ್ಲಮ್ಮ ಗಾಣಿಗೇರ, ಕಲ್ಲಪ್ಪ ಮೂಕಪ್ಪನವರ, ಉದಯ ಸಮಗಾರ ಸೇರಿದಂತೆ ಇತರರು ಭಾಗವಹಿಸಿದ್ದರು.